ಯಕ್ಷಗಾನಕ್ಕೆ ದೇಶೀಯ ಮನ್ನಣೆ ಸಿಗಲಿ: ಡಾ. ಮೋಹನ್ ಆಳ್ವ
ಲೇಖಕರು : ವಿಜಯ ಕರ್ನಾಟಕ
ಭಾನುವಾರ, ನವ೦ಬರ್ 8 , 2015
|
ನವ೦ಬರ್ 8, 2015
|
ಯಕ್ಷಗಾನಕ್ಕೆ ದೇಶೀಯ ಮನ್ನಣೆ ಸಿಗಲಿ: ಡಾ. ಮೋಹನ್ ಆಳ್ವ
ಕೊಣಾಜೆ :
ನಮ್ಮ ರಾಜ್ಯದ ಹೆಮ್ಮೆಯ ಶ್ರೀಮಂತ ಕಲೆ ಯಕ್ಷಗಾನವನ್ನು ಇನ್ನಷ್ಟು ವಿಸ್ತಾರಗೊಳಿಸುವ ಸಲುವಾಗಿ ರಾಜ್ಯ ಸರಕಾರ ಮೊದಲಾಗಿ ಅದನ್ನು ನಮ್ಮ ರಾಜ್ಯದ ಕಲೆ ಎಂದು ಘೋಷಿಸಬೇಕು. ಹಾಗೆಯೇ ದೇಶದ ಎಂಟು ಶಾಸ್ತ್ರೀಯ ನೃತ್ಯ ಪ್ರಾಕಾರಗಳಲ್ಲಿ ಯಾವುದಕ್ಕೂ ಕಡಿಮೆ ಇಲ್ಲದ ಯಕ್ಷಗಾನಕ್ಕೆ ದೇಶೀಯ ಮನ್ನಣೆ ಸಿಗಬೇಕು. ಆದಕ್ಕೆ ಶಾಸ್ತ್ರೀಯ ಸ್ಥಾನಮಾನ ಸಿಗಬೇಕು. ಆ ಮೂಲಕ ಯಕ್ಷಗಾನಕ್ಕೆ ಜಾಗತಿಕ ಮಟ್ಟದಲ್ಲಿ ಶೋಭೆ ತರಲು ಸಾಧ್ಯ ಎಂದು ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಅಭಿಪ್ರಾಯಪಟ್ಟರು.
ಮಂಗಳೂರು ವಿವಿಯ ಮಂಗಳಾ ಸಭಾಂಗಣದಲ್ಲಿ ಶನಿವಾರ ಮಂಗಳೂರು ವಿಶ್ವವಿದ್ಯಾಲಯದ ಡಾ.ಪಿ. ದಯಾನಂದ ಪೈ ಮತ್ತು ಪಿ. ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರದ 2015ನೇ ಸಾಲಿನ ಯಕ್ಷಮಂಗಳ ಪ್ರಶಸ್ತಿ ಮತ್ತು ಕೃತಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ಒಂದು ಪರಿಪೂರ್ಣ ಕಲೆಯಾಗಿರುವ ಯಕ್ಷಗಾನಕ್ಕೆ ಕನಿಷ್ಠವೆಂದರೂ 600 ವರ್ಷಗಳ ಇತಿಹಾಸವಿದೆ. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುಮಾರು 40 ಮೇಳಗಳಿದ್ದು, 1500 ಕಲಾವಿದರು ಸೇವೆ ಸಲ್ಲಿಸುತ್ತಿದ್ದಾರೆ. ಹಾಗೆಯೇ 200ಕ್ಕೂ ಅಧಿಕ ಹವ್ಯಾಸಿ ಮೇಳಗಳಿದ್ದು, ಅದರಲ್ಲಿ 5000ಕ್ಕೂ ಅಧಿಕ ಕಲಾವಿದರಿದ್ದಾರೆ. ಯಕ್ಷಗಾನಕ್ಕೆ ಜಗತ್ತಿನಾದ್ಯಂತ ಲಕ್ಷಾಂತರ ಪ್ರೇಕ್ಷಕ ವರ್ಗ ಇದೆ. ಹಾಗಾಗಿ ಯಕ್ಷಗಾನವನ್ನು ಶಿಕ್ಷಣದ ಜತೆ ಕೊಂಡೊಯ್ಯುವ ಅನಿವಾರ್ಯತೆ ಇರುವುದರಿಂದ ಕೇರಳದಲ್ಲಿ ಕಥಕ್ಕಳಿಗೆ 'ಕಲಾಮಂಡಲಂ' ಮೂಲಕ ಹೆಚ್ಚಿನ ಅಧ್ಯಯನಕ್ಕೆ ಅವಕಾಶ ಸಿಕ್ಕಂತೆ ಇಲ್ಲಿ ಯಕ್ಷಗಾನ ರಾಜ್ಯದ ಕಲೆಯಾಗಿ ಘೋಷಣೆಯಾದರೆ ಅಧ್ಯಯನಕ್ಕೆ ಹೆಚ್ಚಿನ ಅವಕಾಶ ನಮ್ಮದಾಗಿಸಿಕೊಳ್ಳಲು ಸಾಧ್ಯ ಎಂದು ಹೇಳಿದರು.
25 ಸಾವಿರ ರೂ. ನಗದು, ಪ್ರಶಸ್ತಿಪತ್ರ, ಸ್ಮರಣಿಕೆ ಮತ್ತು ಸನ್ಮಾನಗಳನ್ನು ಒಳಗೊಂಡ ಯಕ್ಷಮಂಗಳ ಪ್ರಶಸ್ತಿಯನ್ನು ಹೊಸ್ತೋಟ ಮಂಜುನಾಥ ಭಾಗವತ, ಮಾರ್ಗೋಳಿ ಗೋವಿಂದ ಶೇರೆಗಾರ, ಸಂಪಾಜೆ ಶೀನಪ್ಪ ರೈ ಮತ್ತು ಲೀಲಾವತಿ ಬೈಪಾಡಿತ್ತಾಯ ಸ್ವೀಕರಿಸಿದರು.
10 ಸಾವಿರ ರೂ. ನಗದು, ಪ್ರಶಸ್ತಿಪತ್ರ ಮತ್ತು ಸ್ಮರಣಿಕೆಗಳನ್ನು ಒಳಗೊಂಡ ಯಕ್ಷಮಂಗಳ ಕೃತಿ ಪ್ರಶಸ್ತಿಯನ್ನು ಹಂಪಿ ಕನ್ನಡ ವಿವಿಯ ಪ್ರೊಫೆಸರ್ ಡಾ. ಮೋಹನ ಕುಂಟಾರ್ ಸ್ವೀಕರಿಸಿದರು.
ಅಧ್ಯಕ್ಷತೆ ವಹಿಸಿದ ಮಂಗಳೂರು ವಿವಿ ಕುಲಪತಿ ಪ್ರೊ. ಕೆ. ಭೈರಪ್ಪ ಮಾತನಾಡಿ, ಮಂಗಳೂರು ವಿವಿ ಯಕ್ಷಗಾನ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಹೆಚ್ಚಿನ ಪ್ರೋತ್ಸಾಹ ನೀಡುತ್ತಾ ಬಂದಿದೆ ಎಂದರು.
ಯಕ್ಷಗಾನಕ್ಕೆ ವಿಶೇಷವಾದ ಮನ್ನಣೆ ಸಿಗುತ್ತಿದೆ. 30ಕ್ಕೂ ಅಧಿಕ ಪಿಎಚ್ಡಿ ಗ್ರಂಥಗಳು ಯಕ್ಷಗಾನ ಕುರಿತಾಗಿ ಸಂದಿದೆ. ಯಕ್ಷಗಾನ ಉತ್ಕ ೃಷ್ಟ ಗುಣಮಟ್ಟ ಕಾಯ್ದುಕೊಂಡಿದೆ ಎಂದು ವಿದ್ವಾಂಸ, ಯಕ್ಷಗಾನ ಕಲಾವಿದ ಡಾ.ಎಂ. ಪ್ರಭಾಕರ ಜೋಶಿ ಅಭಿನಂದನಾ ಭಾಷಣದಲ್ಲಿ ಹೇಳಿದರು.
ಯಕ್ಷಗಾನ ಸಂಬಂಧಿ ಅಮೂಲ್ಯವಾದ ಕೃತಿಗಳು ಪ್ರಶಸ್ತಿಗೆ ಪಾತ್ರವಾದರೂ ಆ ಕೃತಿಗಳನ್ನು ವಿದ್ಯಾರ್ಥಿಗಳು ಓದಿ ಮನನ ಮಾಡಿಕೊಂಡು ಮುಂದಿನ ದಿನಗಳಲ್ಲಿ ಅವರೂ ಕೂಡ ಕೃತಿಗಳನ್ನು ಬರೆಯುವಂತಾದರೆ ಬರಹಗಾರನ ಉದ್ದೇಶ ಈಡೇರುತ್ತದೆ ಎಂದು ನುಡಿದರು.
ಸನ್ಮಾನಿತರ ಪರವಾಗಿ ಹೊಸ್ತೋಟ ಮಂಜುನಾಥ ಭಾಗವತ ಮಾತನಾಡಿದರು. ಕೇಂದ್ರದ ನಿರ್ದೇಶಕ ಡಾ.ಕೆ. ಚಿನ್ನಪ್ಪ ಗೌಡ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ಎಸ್ವಿಪಿ ಅಧ್ಯಯನ ಕೇಂದ್ರದ ಸಹ ಪ್ರಾಧ್ಯಾಪಕ ಡಾ. ಧನಂಜಯ ಕುಂಬ್ಳೆ, ಯಕ್ಷಗಾನ ಅಧ್ಯಯನ ಕೇಂದ್ರದ ಸಂಶೋಧನಾ ಸಹಾಯಕ ಸತೀಶ್ ಕೊಣಾಜೆ ಸನ್ಮಾನ ಪತ್ರ ವಾಚಿಸಿದರು. ಅಧ್ಯಯನ ಕೇಂದ್ರದ ಡಾ. ರಾಜಶ್ರೀ ಕಾರ್ಯಕ್ರಮ ನಿರೂಪಿಸಿದರು.
ಸಮಾರಂಭದ ಬಳಿಕ ಮಂಗಳೂರು ವಿವಿಯ ಯಕ್ಷಗಾನ ಅಧ್ಯಯನ ಕೇಂದ್ರದ ಯಕ್ಷಮಂಗಳ ವಿದ್ಯಾರ್ಥಿ ತಂಡದ ಕಲಾವಿದರಿಂದ 'ಸಾಯುಜ್ಯ ಸಂಗ್ರಾಮ' ಯಕ್ಷಗಾನ ಬಯಲಾಟ ಪ್ರದರ್ಶನ ನಡೆಯಿತು.
ಕೃಪೆ :
vijaykarnataka
|
|
|